Monday, September 17, 2007


ಕೊಂಕಣ ರೇಲ್ವೆ ಮೂಡಗಣಪತಿಯ ಹತ್ತ್ರ.....




Wednesday, June 27, 2007

ರಾಜಕೀಯ..

ಇದಲ್ಲ ಇಂದ್ರಜಾಲ, ಮಂತ್ರ ಮಾಯ
ಹೆರುವದು ಹಗರಣದ ಮಗುವ,
ಮಾಸುವಮುನ್ನ ಹಳೆಯ ಗಾಯ
ಹರಿಯುವುದು ಹಣದ ಹೊಳೆ,
ಹರಿದಂತೆ ಬಾರಿನಲಿ ಪೇಯ
ಹೆದರಬೇಡ ಗೆಳೆಯ,
ಇದುವೇ ರಾಜಕೀಯ.

Tuesday, June 26, 2007


ಉಪಮಾ ಕಾಳಿದಾಸಸ್ಯ.
ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು,
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ
ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ ಕಮಲದಲ್ಲಿ ಇನ್ನೆರಡು ಕಮಲಗಳು ಹೇಗೆ ಅರಳಿವೆ?. ಎಷ್ಟು ಸುಂದರವಾಗಿದೆ ಅಲ್ವಾ? ಕಾಳಿದಾಸ ನಿಜವಾಗಿಯೂ ಆ ಶಾರದಾಂಬೆಯ ಪುತ್ರನೇ
ಇದರ ಹಿಂದಿನ ಕಥೆ ನನಗೆ ತಿಳಿದಷ್ಟು ಹೇಳೋದಾದ್ರೆ, ಭೋಜರಾಜನ ಆಸ್ಥಾನ ವಿದ್ವಾಂಸರುಗಳ ಕಾಶಿಯಾಗಿತ್ತು. ಅಲ್ಲಿ ಸಾಹಿತ್ಯ ಪ್ರಪಂಚದ ಅಥಿರಥ ಮಹಾರಥಿಗಳಿದ್ರು. ಒಮ್ಮೆ ಒಬ್ಬ ವಿದ್ವಾಂಸ ಬಂದು ಸವಾಲು ಹಾಕಿದ, ’ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ’ ಇದರ ದ್ವಿತೀಯ ಚರಣವನ್ನ ಪೂರ್ತಿ ಮಾಡಿ.ಇದನ್ನ ಪೂರ್ತಿ ಮಾಡಿದ್ರೆ ನಾನು ಅವರ ದಾಸ ಆಗ್ತೀನಿ ಇಲ್ಲ ಅಂದ್ರೆ ಆಸ್ಥಾನದಲ್ಲಿರುವ ಎಲ್ಲ ವಿದ್ವಾಂಸರೂ ಅವನಿಗೆ ಶರಣಾಗ್ಬೇಕು ಮತ್ತು ರಾಜ್ಯದಲ್ಲಿ ಅರ್ಧ ಭಾಗ ಕೊಡ್ಬೇಕು ಅಂತ ಸವಾಲು ಹಾಕಿದ. ಆಸ್ಥಾನ ವಿದ್ವಾಂಸರೆಲ್ಲ ಮೂಕವಿಸ್ಮಿತರಾದ್ರು ಯಾರ ಹತ್ರಾನೂ ಇದಕ್ಕೆ ಉತ್ತರ ಇರ್ಲಿಲ್ಲ. ಇದನ್ನ ನೋಡಿ ಭೋಜ ಸಂಪೂರ್ಣವಾಗಿ ವಿಚಲಿತನಾಗಿ ಹೋದ. ಆಸ್ಥಾನದಲ್ಲಿ ಕಾಳಿದಾಸನ ಅನುಪಸ್ಥಿತಿ ಎದ್ದು ಕಾಣ್ತಾ ಇತ್ತು. ಭೋಜ ಕಾಳಿದಾಸನ ನಡುವೆ ಆದ ಕೆಲವು ತಪ್ಪು ಕಲ್ಪನೆಗಳಿಂದ ಕಾಳಿದಾಸನನ್ನ ದೇಶದ ಹೊರಗಟ್ಟಿದ್ದ. ಸಮಸ್ಯೆಯ ಗಂಭೀರತೆಯನ್ನು ನೋಡಿ ಭೋಜ ಡಂಗುರ ಸಾರಿಸ್ದ. ಯಾರು ಸಮಸ್ಯೆನಾ ಪರಿಹರಿಸ್ತಾರೋ ಅವರಿಗೆ ಅರ್ಧ ರಾಜ್ಯ ಕೊಡೋದಾಗಿ. ಇದನ್ನ ಕೇಳಿದ ಕಾಳಿದಾಸನಿಗೆ ಆಶ್ರಯ ಕೊಟ್ಟಿದ್ದ ವೇಶ್ಯೆಯೊಬ್ಬಳು ಕಾಳಿದಾಸನ ಹತ್ತಿರ ಈ ಸಮಸ್ಯೆಯನ್ನ ಪೂರ್ಣಗೊಳಿಸ್ತಾಳೆ.ಅದನ್ನ ಓದಿದಾಗ ಭೋಜನಿಗೆ ಇದು ಕಾಳಿದಾಸನೇ ಬರೆದ ವಾಕ್ಯ ಎಂದು ಅರ್ಥ ಆಗುತ್ತೆ ಮತ್ತು ಅವರ ಪುನರ್ಮಿಲನ ಆಗುತ್ತೆ.
ಈ ಶ್ಲೋಕವನ್ನ ಸೂಕ್ಷ್ಮವಾಗಿ ಗಮನಿಸ್ದ್ರೆ ’ಮುಖಾಂಭೋಜೇ’ಅಲ್ಲಿ ಭೋಜರಾಜ ಕಾಣ್ತಾನೆ. ಎಷ್ಟು ಸುಂದರವಾಗಿ ಪೋಣಿಸಿದ ವಾಕ್ಯ ಅಲ್ವಾ. ಅಂತಹ ಸುಂದರ ಶಬ್ದಗಳ ಹಾರವನ್ನು ಸೃಷ್ಟಿಸಿದ ಆ ಕಲಾವಿದನ್ನ ಎಷ್ಟು ಹೊಗಳಿದ್ರೂ ಸಾಲ್ದು ಅಲ್ವಾ?ಕಾಳಿದಾಸನ ಬಗ್ಗೆ ಮಾತಾಡೋಕ್ಕೆ ಹೋದ್ರೆ ಶಬ್ದಗಳೇ ಸಾಲಲ್ಲ. ಅಭಿಜ್ನಾನ ಶಾಕುಂತಲೆಯಲ್ಲಿ ಅವ ಸೃಷ್ಟಿಸಿದ ವಾಕ್ಯಸರಪಳಿಗಳಿಗೆ ಸಮನಾದ್ದು ಯಾವುದೂ ಇಲ್ಲ ಅನ್ಸುತ್ತೆ.ಅದರಲ್ಲಿ ಶಾಕುಂತಲೆ ಋಷ್ಯಾಶ್ರಮವನ್ನು ಬಿಟ್ಟು ಹೋಗುವಾಗ ಬರೆದ ನಾಲ್ಕು ಶ್ಲೋಕಗಳು ಜಗತ್ತಿನ ಅತಿಸುಂದರ ಶ್ಲೋಕ ಅಂತಾರೆ. ಸಂಸ್ಕೃತ ಭಾಷೆ ಇಷ್ಟು ಸುಂದರವಾಗಿ ಕಾಣೋದಕ್ಕೆ ಬಹುಶಃ ಇಂಥ ಮಹನೀಯರು ಬರೆದ ನುಡಿಮುತ್ತುಗಳೇ ಕಾರಣ ಅನ್ಸುತ್ತೆ.
ಇದೆಲ್ಲಾ ಆಲೋಚನೆ ಮಾಡ್ತಾ ಇರ್ಬೇಕಾದ್ರೆ ಕರಂಟು ಬಂತು. ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...

Friday, June 22, 2007



ಅನ್ನ ಪರಬ್ರಹ್ಮ.....

ಇವೊತ್ತು ಬಹಳ ದಿನಗಳ ನಂತರ ನಮ್ಮ ಕ್ಯಾಂಟೀನ್ ಅಲ್ಲಿ ಊಟ ಮಾಡೋಕ್ಕೆ ಹೋಗಿದೆ (ವರುಣನ ಕೃಪೆಯಿಂದ). ನಮ್ಮ ಅಲ್ಲಿ ಊಟ ಸರಿ ಇರಲಿಲ್ಲ ಅವನಿಗೆ ಹಿಡಿ ಶಾಪ ಹಾಕ್ತಾ ಅರ್ಧ ಊಟ ಮಾಡ್ಬಿಟ್ಟು ಇನ್ನರ್ಧನ ಹಂಗೆ ಎಸೆದ್ಬಿಟ್ಟು ಬಂದೆ.ಬಂದು ಹಂಗೇ ಕೂತು ಮೇಲ್ ನೋಡ್ತಾ ಇದ್ದಾಗ, ಈ ಚಿತ್ರ ಕಾಣಿಸ್ತು. ಒಂದೇ ಸಾರಿ ಯೇನೋ ಒಂಥರಾ ಪಾಪ ಭಾವನೆ ಬರೊಕ್ಕೆ ಶುರು ಆಯ್ತು.ಇದು ನಿಜವಾಗ್ಲೂ ವಿಚಾರ ಮಾಡೊಂತ ವಿಷಯ ಅಲ್ವಾ?? ನಾವು ದಿನಾ ಯೆಷ್ಟು ತಿನ್ನೋ ಪದಾರ್ಥಗಳನ್ನ ಎಸೀತೀವಿ, ಯಾವತ್ತಾದ್ರೂ ಇಂಥವರ ಬಗ್ಗೆ ಆಲೋಚನೆ ಮಾಡಿದೀವಾ?? ಇವ್ರು ನಮ್ಮ ಸುತ್ತ ಮುತ್ತಾನೇ ಇರ್ತಾರೆ ಆದ್ರು ನಾವು ಗಮನಿಸೋಲ್ಲ ಲೊಕದ ಕಷ್ಟ ಎಲ್ಲಾ ನಮಗೆ ಯಾಕೆ?? ನಾವು ಎ.ಸಿ ರೂಮಲ್ಲಿ ಚೆನ್ನಾಗಿದ್ರೆ ಆಯ್ತು ಅಲ್ವಾ??
ನಮ್ಮಲ್ಲಿ "ಅನ್ನಂ ಪರಬ್ರಹ್ಮಂ" ಅಂತಾರೆ ಅದು ಇದ್ರೇನೆ ನಮ್ಮ ಜೀವನ ಅಲ್ವಾ?? ಯೆಲ್ಲಾರು ಮಾಡುವದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ನಾವು ಇದರ ಸಲುವಾಗಿ ಯೆಷ್ಟು ಕಷ್ಟ(?) ಪಡ್ತೇವಲ್ವಾ?? ಮತ್ತೆ ಸಿಕ್ಕಾಗ ಬಿಡೋದು ಯಾಕೆ??? ಇದು ಬಹಳ ಇರುವದು ಐಟಿ ಸಂಸ್ಥೆಗಳಲ್ಲಿ. ಊಟ ಚೆನ್ನಾಗಿ ಇರೋಲ್ಲ ಅದ್ಕೆ ಹಾಕ್ಕೊಂಡಿದ್ದೆಲ್ಲಾ ತೊಟ್ಟಿ ಪಾಲು. ಬಹಳ ಜವಾಬ್ದಾರಿತವಾಗಿ ಹೇಳೋದಾದ್ರೆ ನಾವು ಯೆಷ್ಟು ಬೇಕೋ ಅಷ್ಟೇ ಹಾಕ್ಕೊಂಡ್ರೆ ಒಳ್ಳೇದು. ಆದ್ರೆ ಯಾರು ಆ ಭೋಜನ ಮಂದಿರ ನಡೆಸ್ತಾ ಇದಾನೋ ಅವನ್ದು ಕೆಲವು ಜವಾಬ್ದಾರಿ ಇರುತ್ತೆ.ನಮಗೆ ಮೃಷ್ಟಾನ್ನ ಬೇಡಾ ಸ್ವಾಮಿ, ರುಚಿಯಾಗಿರೋ ಅನ್ನ ಸಾಂಬಾರು ಕೊಡಿ ಸಾಕು. ಅದಕ್ಕೆ ಅವನ ಉತ್ತರ ’ಸಾರ್ ಒಂದೇ ಸಾರಿ ೪೦೦೦ ಊಟ ಮಾಡ್ಬೇಕು ಅಂದಾಗ ರುಚಿ ಬರಲ್ಲಾ!!!’ ಮಾಡಕ್ಕಾಗಲ್ಲಾ ಅಂದ್ರೆ ಯೇನಕ್ಕೆ ತಗೋತೀಯಾ?? ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ರ ಇಲ್ಲ। ಇದಕ್ಕೆ ನಮ್ಮ ಕಂಪನಿಗಳೂ ಯೇನು ಹೇಳಲ್ಲ.ನಾವಂತೂ ಬಿಡಿ ಸಭ್ಯಸ್ತರು ಅವನ್ನ ಕೇಳಿದ್ರೆ ನಮ್ಮ ಮರ್ಯಾದೆ ಪ್ರಶ್ನೆ ಯೇನು ಅಲ್ವಾ???
ಅವೆಲ್ಲ ಆಗೊ ಕೆಲ್ಸ ಅಲ್ಲ ಬಿಡಿ, ಅದಕ್ಕೆ ಪ್ರೊಡಕ್ಷನ್ ಕಂಪನಿಗಳೇ ಬೇಕು. ಕನಿಷ್ಠ ನಾವು ಮಾಡೊಕ್ಕೆ ಆಗೋದು ದಯವಿಟ್ಟು ನಿಮ್ಮ ತಟ್ಟೆಯಲ್ಲಿ ಹಾಕಿದ್ದನ್ನ ತಿನ್ನಿ, ಅದು ಚೆನ್ನಾಗಿ ಇರ್ಲಿ ಇಲ್ದೆ ಇರ್ಲಿ ದಯವಿಟ್ಟು ಎಸೀಬೇಡಿ. ನೀವು ದಾರಿಯಲ್ಲಿ ಹೋಗ್ತಾ ಇರೋವಾಗ ಯಾವ್ದಾದ್ರು ಚಿಕ್ಕ ಮಗು ಭಿಕ್ಷೆ ಹಾಕೋ ಬದ್ಲು ಸ್ವಲ್ಪ ಕಷ್ಟ ತಗೊಂಡು ಪಕ್ಕದಲ್ಲಿರೋ ಅಂಗಡಿ ಇಂದ ಯೇನಾರ ತಿನ್ನೋಕೆ ಕೊಡ್ಸಿ. ನೀವು ನೀಡಿದ ಹಣ ಆ ಮಗುಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲಾ... ಕೊನೆಯದಾಗಿ ನಿಮ್ಮ ಮನೆಯಲ್ಲಿ ಯಾವ್ದೇ ಕರ್ಯಕ್ರಮ ಇದ್ದು ಊಟ ಹೆಚ್ಚಾಗಿದ್ರೆ ದಯವಿಟ್ಟು 1098-child helpline ಗೆ ಕರೆ ಮಾಡಿ ಅದು ಯಾವ್ದೋ ಹಸಿದ ಮಗುವಿನ ಹೊಟ್ಟೆಯನ್ನ ತುಂಬ್ಸುತ್ತೆ.ನಮ್ಮ ಕಡೆಯಿಂದ ಇಷ್ಟನ್ನಾದ್ರೂ ಮಾಡ್ಬಹುದಲ್ಲಾ??

Thursday, June 21, 2007

ಪ್ರಜಾಪಭುತ್ವ

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..

ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,
ಆದರೆ ಪ್ರತಿ ಶಾಸಕನ ಹತ್ತಿರ
ಕನಿಷ್ಠ ೫೦ ಕೋಟಿ...

ಈ ಕ್ಷೇತ್ರದಿ ಮುದುಕರದೇ
ದರಬಾರು,
ಪ್ರತಿಯೊಬ್ಬನ ಹೆಸರಲ್ಲೂ
ಗಲ್ಲಿ ಗಲ್ಲಿಯಲೊಂದು ಬಾರು..

ರೈತ ಸಾಲ ತೀರಿಸದೇ
ಸತ್ತರೂ ಸೈ,
ಈ ರಾಜಕಾರಣಿಯದು
ಎಮ್ಮೆಯ ಮೈ...

ಐದು ವರ್ಷಕ್ಕೆ ಬದಲಾಗುವದು
ರಕ್ತಹೀರುವ ಪಾಳಿ,
ಸದೆಬಡಿಯಲಾರೆವೆ ಇವರ
ಹೊಮ್ಮಿಸಿ ಬದಲಾವಣೆಯ ಗಾಳಿ...

ಹುಹ್!!!! ಎಲ್ಲ ನೋಡಿ ಸುಮ್ಮನಿರುವದೇ
ನಮ್ಮ ತತ್ವ,
ಇದೇ ಸ್ವಾಮಿ ನಮ್ಮ್ರರ್ಥದಲ್ಲಿ
ಪ್ರಜಾಪ್ರಭುತ್ವ.

Thursday, January 18, 2007

ಸಂಧ್ಯೆ.....
ಅದಾಗಿತ್ತು ಮಾಗಿಯ ಚಳಿಯ ಸಂಧ್ಯೆ
ಬಳಿಯಿದ್ದಳು ಎನ್ನ ವಿಂಧ್ಯೆ
ಸೂರ್ಯನೂ ನಾಚಿದ್ದ ನೋಡಿವಳ ರೂಪ
ಅದಕಾಗಿ ತಗ್ಗಿಸಿದ್ದ ಅವನ ತಾಪ

ಈ ನನ್ನ ಹೂವು ಸೂಸುತಿತ್ತು ಪ್ರೇಮಗಂಧ
ಇವಳೆದುರು ಉಪವನದ ಪೂಗಳೆಲ್ಲ ಮಂದ
ನಾಚಿ ನೋಡಿದ್ದಳಿವಳು ನನ್ನೆಡೆಗೆ
ಭಾವಿಸಬಲ್ಲೆನೆ ಪದವ ಆಗ ಹುಟ್ಟಿದ ಸೆಲೆಗೆ

ಮನ ಕೂಗಿತ್ತು ಏನಾದರೂ ಉಲಿಯೆನ್ನ ಕೋಗಿಲೆ
ನನ್ನ ಜತೆ ಕಿವಿಯಗಲಿಸಿ ಕೂತಿಹುದು ಆ ಮಲೆ
ದೂರದಲಿ ನಡೆದಿತ್ತು ವೃಧ್ಧ ದಂಪತಿಗಳ ಸಲಾಪ
ನೋಡಿ ಅನಿಸಿತ್ತು ಪ್ರೀತಿಗಿಲ್ಲ ವಯಸು ರೂಪ

ಕಣ್ಣಲ್ಲೇ ಮಾತು ಮುಗಿಸಿದಾಗ ಆಗಿತ್ತು ಹೊತ್ತು
ಬರುವೆನೆಂದಳು ಒತ್ತಿ ಹಣೆಯ ಮೇಲೊಂದು ಮುತ್ತು
ನಾಗವೇಣಿಯ ನಡೆಯೆಷ್ಟು ಚಂದ
ಕಲಿಯಬೇಕು ನವಿಲು ಕೂಡ ಇವಳಿಂದ

ಹೊರಟಾಗ ಮನೆಗೆ ಬೆಳುಗುತಿದ್ದವು ದಾರಿ ದೀಪ
ಮನದಲಿ ಮಿನುಗುತಿತ್ತು ಬರೀ ಅವಳ ರೂಪ
ಬುಧ್ಧಿ ಹೇಳಿತ್ತು ಈ ದಾರಿಯಲಿದೆ ಆಪತ್ತು
ಆದರೆ???
ಹೃದಯಕೇರಿತ್ತು ಪ್ರೀತಿಯಾ ಮತ್ತು....

Thursday, January 11, 2007

ಎಣ್ಣೆ....
ಎಣ್ಣೆಯ ಗಮ್ಮತ್ತು ಗೊತ್ತಾ ಗೆಳೆಯ
ಬಿಡಿಸುವದು ಮನದ ಒಂದೊಂದೇ ತೊಳೆಯ
ಕುಡಿದವಗೆ ಗೊತ್ತಿದರ ಮತ್ತು
ಮಾನವನೂ ಮಡುವ ಕಪಿ ಕಸರತ್ತು

ಗಮಾರನೂ ಮಾತಾಡುವ ಇಂಗ್ಲೀಸು
ಕೋಡಂಗಿಯೂ ಕೊಡುವ ಅಣ್ಣಾವ್ರ ಪೋಸು
ಇದಕಿಲ್ಲ ಜಾತಿ ಮತಗಳ ಬಾಧೆ
ಒಳಸೇರಿದರೆ ಎಲ್ಲರೂ ಮಾಡುವರು ಬೋಧೆ

ತಿರುಗುವದು ಕೆಳಗಿರುವ ಇಳೆ
ಬರಡು ಮನದಲಿ ಸುರಿಯುವುದು
ಕನಸುಗಳ ಮಳೆ.....
ಏರಿಸಿದರಂತೂ ಬಾಟಮ್ ಸಪ್ಪು
ಹಂಡೆಯಂತೆ ಕಾಣುವದು ಕಪ್ಪು

ಹೆಂಡತಿಯ ಮುಂದೆ ನಿಲ್ಲಲು ನೀಡುವದು ಧೈರ್ಯ
ಇದರ ಸಾಮ್ರಾಜ್ಯದಲ್ಲಿ ಎಲ್ಲ ಪ್ರಜೆಯೂ ಮೌರ್ಯ

ಅದಕೇ ಹಿಂದಿಯಲಿ ಹೇಳುವದು
ಜಾಮ್ ಕೋ ಲಗಾವೊ ಹೋಂಟ್
ಅದೇ ಅಂಗ್ಲದಲ್ಲಿ
ಹೋಲ್ ನೈಟ್ ಫುಲ್ ಟೈಟ್

Thursday, January 04, 2007

ಹನಿ.....

ಕರುಣೆ

ಹೇ ದೇವ ಯೆನಗೇಕೆ ಬರುತಿಲ್ಲ ಸಾವು

ಎಷ್ಟು ದಿನ ಸಹಿಸಲಿ ಈ ವಿರಹದ ನೋವು

ನಿನಗಿಲ್ಲವೆ ಒಂದು ಹಿಡಿ ಕರುಣಿ

ಅಂದಾಗ ಅವನೆಂದ,

ನಿನ್ನ ಜೀವವ ಆಗಲೇ ಕೇಳಾಗಿದೆ ಆ ತರುಣಿ

ದನಿ

ನಿನ್ನ ಕೊರಳ ಕೊಳಲಿಂದ ಬರುತಿರೆ ನನ್ ಹೆಸರ ನಾದ

ಅನಿಸುತಿದೆ ಸಪ್ತ ಸ್ವರದೊಳು ನಡೆಯುತಿದೆ ಸಂವಾದ

ಪವನವೂ ಆಲಿಸುತಿದೆ ಮಾಡದೇ ಸದ್ದು

ಕೋಗಿಲೆ ಮಲಗಿದೆ ನಾಚಿ ಮುಸುಕ ಹೊದ್ದು

ಗಣಿತ

ಗಣಿತದಿ ನೀ ಬಲು ಜಾಣೆ

ಹ್ರುದಯವ ಕೂಡಿ,ವಿರಹವ ಕಳೆದೆ

ಸಂತೋಷವ ಗುಣಿಸಿ, ದುಃಖವ ಭಾಗಿಸಿದೆ,

ಎನ್ನ ಹ್ರುದಯವನೇ ಕದ್ದು,

ನನ್ನ ಅವಶೇಷವಾಗಿಸಿದೆ

Wednesday, January 03, 2007


ಕಲ್ಲರಳಿ ಹೂವಾಗಿ....



ಮೊನ್ನೆ ಶನಿವಾರ ಬಹಳ ದಿನಗಳ ನಂತರ ಕನ್ನಡ ಚಿತ್ರವನ್ನು ನೋಡುವ ಮನಸ್ಸಾಯಿತು ಅದು ನಾಗಾಭರಣ ಅವರ ಚಿತ್ರವೆಂಬ ಪ್ರೇರಣೆಯೋ ಗೊತ್ತಿಲ್ಲ :)



ಕನ್ನಡ ಚಿತ್ರಗಳಲ್ಲಿ ಲಾಂಗು ಮಚ್ಚು ಬಂದಾಗಿನಿಂದ ಚಿತ್ರಮಂದಿರದ ಕಡೆ ತಲೆ ಹಾಕಿ ಮಲಗುವದೇ ಅಪರೂಪವಾಗಿ ಬಿಟ್ಟಿತ್ತು. ಅಂತೂ ಬೆಳಗಿನಿಂದ ತಯಾರಿ ನಡೆದಿತ್ತು ನಮ್ಮ ಕೋಣೆಯಲ್ಲಿ ಎಲ್ಲರೂ ಸೂರ್ಯವಂಶಸ್ಥರಾದ್ರಿಂದ, ೪.೩೦ ರ ಪ್ರದರ್ಶನ ಎಂದು ನಿರ್ಧಾರ ಮಾಡಿದ್ವಿ. ಅಂತೂ ಎಲ್ಲ ತಯಾರಿ ಮಾಡಿ ಹೊರಟಾಗ ೩ ಘಂಟೆ ನಮ್ಮ ಬೆಮನಸಾ ನೂ ನಮ್ಮ ಮೆಲೆ ಮುನಿಸ್ಕೊಂಡಂಗೆ ಕಾಣ್ತಾ ಇತ್ತು ೨೦೧ ಗಳ ವರ್ಷ ಆಗ್ತಾ ಇತ್ತೇ ಹೊರತು ಒಂದೂ ಕೆಂ.ವಾ ನಿಲ್ದಾಣದ ಕಡೆಯ ಧೂಮ್ರಶಕಟಗಳು ಕಾಣಿಸ್ತಾ ಇರ್ಲಿಲ್ಲ. ಅಂತೂ ಮರಳುಗಾಡಿನಲ್ಲಿ ಓಯಸಿಸ್ ಸಿಗೋ ಥರಾ ಒಂದು ೨೫ ಬಂತು. ಇವತ್ತು ಕರಿಯ ಚೀಟಿಯೇ ಗತಿ ಅಂದ್ಕೊತಾ ಗಾಡಿ ಹತ್ತಿದ್ವಿ ಹಿಂದಿ ಚಿತ್ರಕ್ಕೆ ೧೮೦ ಕೊಡ್ಬೇಕಾದ್ರೆ ಕನ್ನಡ ಚಿತ್ರಕ್ಕೆ ೮೦ ಕೊಟ್ಟ್ರೆ ಯೇನು ಮೋಸ ಇಲ್ಲ ಎಂಬ ಸಮಾಧಾನ ಬೇರೆ. ಸಂತೋಷ್ ಚಿತ್ರಮಂದಿರಕ್ಕೆ ಕಾಲಿಟ್ಟಾಗ ಆಶ್ಚರ್ಯ!!!!!!!!!! ಬಾಲ್ಕನಿ ಚೀಟಿಯ ಸರದಿ ಖಾಲಿ ಹೊಡಿತಾ ಇತ್ತು ಆಯಪ್ಪನ್ನ ಹೋಗಿ ವಿಚಾರಿಸಿದ್ವಿ ಆಗ ಅವನು ೪.೩೦ ರದ್ದೇ ಅಂತ ಹೇಳಿ ೨ ಚೀಟಿ ಕೊಟ್ಟ. ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕಿದ್ದು ಅಂದ್ರೆ ಒಂದು ಒಳ್ಳೆಯ ಕನ್ನಡ ಚಿತ್ರಕ್ಕೆ ಸಿಗುವ ಪ್ರೋತ್ಸಾಹ ಇಷ್ಟೇನಾ??????????


ಈವಾಗ ಸೀದಾ ನನ್ನ ಅನಿಸಿಕೆಗೆ ಬರ್ತೀನಿ ನನ್ನ ಉದ್ದ ಪೀಠಿಕೆಗೆ ಕ್ಷಮಿಸಿ ನಂದು "ಉಂಡ್ಯಾ ಗೌಡಾ?? ಅಂದ್ರೆ ಮುಂಡಾಸ ಮೂವತ್ತು ಮೊಳ ಅನ್ನೋ ಜಾತಿ". ಚಿತ್ರ ತುಂಬಾನೆ ಚೆನ್ನಾಗಿದೆ ಒಂದು ಸುಂದರ ದ್ರುಶ್ಯ ಕಾವ್ಯ. ಬಿ.ಎಲ್.ವೇಣುರವರು ಪ್ರೇಮ ಕಥೆಯನ್ನು ತುಂಬಾ ಚೆನ್ನಾಗಿ ಹೆಣೆದಿದ್ದಾರೆ.ಚಿತ್ರದುರ್ಗದ ಮದಕರಿ ನಾಯಕನ ಕಾಲದಲ್ಲಿ ನಡೆದ ಈ ಕಥೆಗೆ ಉತ್ತರ ಕರ್ನಾಟಕದ ಭಾಷೆಯ ಸೊಗಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ ಆದರೆ ಎಲ್ಲೂ ಭಾಷೆಯ ಪ್ರೌಢಿಮೆಯನ್ನು ಕಡಿಮೆ ಮಾಡಿಲ್ಲೆ ನಮ್ಮ ನಿರ್ದೇಶಕರು ಸಾಹಿತ್ಯವೂ ಮನ ಮುಟ್ಟುತ್ತೆ.


ವಿಜಯ ರಾಘವೇಂದ್ರ ನಿಮ್ಮನ್ನು ಚಿತ್ರ ಪೂರ್ತಿ ಆವರಿಸುತ್ತಾರೆ ಅಷ್ಟು ಚೆನ್ನಾಗಿ ಅಭಿನಯ ಮಾಡಿದ್ದಾರೆ. ಮುಗ್ಧ ಹುಡುಗನಾಗಿ ಒಬ್ಬ ಪ್ರೇಮಿಯಾಗಿ ಮತ್ತು ದುರ್ಗದ ಸೇನಾನಿಯಾಗಿ ಎಲ್ಲ ರಸಗಳನ್ನೂ ನಿಮಗೆ ಬಡಿಸುತ್ತಾರೆ. ಕೇರಳದ ಬೆಡಗಿ ಉಮಾಶಂಕರಿಯ ಕಮಲ ನಯನದಲ್ಲಿ ಎಲ್ಲ ಭಾವನೆಗಳನ್ನು ತಿಳಿಸಿ ಮಾತು ಕಡಿಮೆ ಮಾಡಿರುವರು ಅದೂ ಉತ್ತಮವೇ.ಮತ್ತೆ ನಮ್ಮ ಮಂಡ್ಯದ ಗಂಡು ಅಂಬರೀಶ್ ಅವರಲ್ಲಿ ಮದಕರಿಯ ಎಲ್ಲಾ ಗತ್ತು ಹೊರ ಹೊಮ್ಮುತ್ತೆ ಮತ್ತೆ ಸುಮಲತ ನಗುತಿರುವ ಶಾರದೆಯಾಗಿ ಅವರ ಪಕ್ಕ ನಿಲ್ಲುತ್ತಾಳೇ ಪೂರಾ ಚಿತ್ರದಲ್ಲಿ ಲೆಕ್ಕ ಮಾಡಿದ್ರೆ ಅವರ ಎರಡು ಸಂಭಾಷಣೆ ಸಿಗಬಹುದೇನೋ.ಅನಂತ್ ನಾಗ್ ಒಳ್ಳೆಯ ಅಭಿನಯ ನೀಡಿದ್ದಾರೆ ಒಂದೆರಡು ಹಾಸ್ಯ ಸನ್ನಿವೇಶಗಳಲ್ಲಂತೂ ಅನಂತ್ ಮತ್ತು ಭಾರತಿ ಮೆರೆಯುತ್ತಾರೆ.ಭಾರತಿ ಒಬ್ಬ ಮುಸ್ಲಿಮ್ ಹುಡುಗಿ ಶೈವರ ಮನೆಯಲ್ಲಿದ್ದಾಗ ಮನೆಯೊಡತಿಗಾಗುವ ತಳಮಳವನ್ನು ಬಹಳ ಚೆನ್ನಾಗಿ ಹೊರಹೊಮ್ಮಿಸಿರುವರು.ಇನ್ನು ದೇವರಾಜ್ ಅವರಿಗೆ ಹೆಚ್ಚಿಗೆ ಕಾಲಾವಕಾಶವಿಲ್ಲ ಆದರು ಸಾಧಾರಣ ಅನ್ನಿಸಿದರು.ಚಂದ್ರು ಅವರದ್ದು ಚಿಕ್ಕ ಪಾತ್ರವಾದರೂ ಚೊಕ್ಕ ಅಭಿನಯ ನೀಡಿದ್ದಾರೆ.


ಇನ್ನು ತಾಂತ್ರಿಕ ವರ್ಗ... ವೇಣುರವರ ಛಾಯಗ್ರಹಣ ನಿಮ್ಮ ಮನವನ್ನು ಸೆಳೆಯುತ್ತೆ.ದುರ್ಗದ ಕೋಟೆಯ ಮೇಲೆ ರವಿಯಾಡುವ ಬೆಳಕು ನೆರಳಿನಾಟಗಳನ್ನ ಬಹಳ ಸುಂದರವಾಗಿ ಸೆರೆ ಹಿಡಿದಿರುವರು.ಪ್ರತೀ ಚೌಕಟ್ಟಿನಲ್ಲು ದುರ್ಗ ಹೊಸ ಕನ್ಯೆಯಾಗಿ ಮೆರೆವಳು.ಇನ್ನ ಹಂಸಲೇಖ ಅವರ ಸಂಗೀತದ ಬಗ್ಗೆ ನಾ ಎನು ಹೆಳಲಿ???? ತಮ್ಮ ಸುಮಧುರ ಸಂಗೀತದಿಂದ ಎಂತಹ ಕಲ್ಲು ಹ್ರುದಯದಲ್ಲೂ ಹೂವನ್ನ ಅರಳಿಸ್ತಾರೆ.ನಾಗಾಭರಣರು ಈ ಹಡಗಿನ ಚುಕ್ಕಾಣಿ ಹಿಡಿದ ಮಹಾಪುರುಷರು.ಇದು ಒಂದು ಕಾಲ್ಪನಿಕ ಕಥೆ ಆದ್ರಿಂದ ತಮ್ಮ ಆಲೋಚನಾ ಲಹರಿಗೆ ಎಲ್ಲಿಯೂ ಕಟ್ಟೆಯನ್ನ ಕಟ್ಟಿಲ್ಲ. ಎಲ್ಲ ತರದ ರಸಗಳ ಒಂದು ಹದವಾದ ಮಿಶ್ರಣ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳೋದಾದ್ರೆ ಎಲ್ಲ್ರೂ ನೋಡ್ಬೇಕಾದ ಒಂದು ಉತ್ತಮ ಚಿತ್ರ. ಇಂತಹ ನಾಲ್ಕು ಚಿತ್ರಗಳು ಬಂದ್ರೆ ಮತ್ತೆ ನಮ್ಮ ಈ ಚಲನಚಿತ್ರೋದ್ಯಮ ಮತ್ತೆ ಸುವರ್ಣಯುಗಕ್ಕೆ ಮರಳುತ್ತೆ ಅಂತ ನನ್ನ ಅನಿಸಿಕೆ. ಮತ್ತೆ ಕಥೆ??????? ಅದನ್ನ ನಾ ಹೇಳೋಲ್ಲ ನೀವು ಚಿತ್ರ ಮಂದಿರಕ್ಕೆ ಹೋಗಿ ನೋಡಿ.....